Tuesday 31 August 2010

ಸಂಧಾನ ಪರ್ವ

ಬೆಳಗ್ಗೆ ಕೇಳಿದ ನನ್ನದಲ್ಲದ ಪ್ರಶ್ನೆ
ಪ್ರಶ್ನೆಯಾಗಷ್ಟೇ ಉಳಿದಿದ್ದರೆ
ಮೂರ್ತಾಸಿನ ಮೌನ ಮಾತಾಗುತ್ತಿತ್ತೇನೋ!
ಉಬ್ಬಿದ ಗಲ್ಲ, ಗಂಟಿಕ್ಕಿದ ಹುಬ್ಬು
ಅರೆಬರೆ ಕವಿತೆಯಾಗುವುದು ತಪ್ಪುತ್ತಿತ್ತೇನೋ!
ದಿಂಬಿನ ಮೇಲೆ ಮುಖ ಒತ್ತಿ
ಬಾರದ ಕಣ್ಣೀರನ್ನು ಕರೆದೂ ಕರೆದು
ನಿತ್ರಾಣವಾದಾಗಲೇ ಆಚೆಮೊನ್ನೆ ಕಳುಹಿಸಿದ ಮೆಸೇಜ್
ಕಣ್ಣಿಗೆ ಬೀಳುವುದೆಂದರೆ ತಮಾಷೆಯ?

ನೀ ಸಮಾಧಾನಿಸಲೆಂದು ನಾನು,
ನಾನೇ ಬಗ್ಗಿ ಬರಲೆಂದು ನೀನು-
ಕಾದು ಕಾದು ಮಧ್ಯಾನ್ಹವಾದಾಗಲೇ
ಸ್ವಪ್ನಸ್ಖಲನ ಬರೀ ಹುಡುಗರಿಗೆ ಮಾತ್ರವೆಂದು
ಅವನೆಂದುಕೊಂಡರೆ ಅದೇ ನಿಜವಲ್ಲ
ಎಂಬ ಹಳೇ ಜೋಕೊಂದು ನೆನಪಾಗಿ,
ಪಕ್ಕದ ಫ್ಲ್ಯಾಟಿನಿಂದ ಹೊಮ್ಮಿದ
ಬಾಸ್ಮತಿ ಪರಿಮಳ
ನಮ್ಮಿಬ್ಬರ ಸಂಧಾನಕ್ಕೆ ಕಾರಣವಾಗಿ
ಸಿಟ್ಟೆಲ್ಲ ಹಾರಿ ಹೋಗಿ
ಒಂದೇ ಉಸಿರಲ್ಲಿ ಮೂರು ಮೆಟ್ಟಿಲು ಜಿಗಿದು
ಬಂದಾಗ ಕಾಲೂ ಉಳುಕಿತು,
ನಗಲು ನೆಪವೂ ಸಿಕ್ಕಿತು
ಎಂದರೆ ನಿನಗೆ ಅಚ್ಚರಿಯ?