Sunday 13 April 2008

ಕನಸ ಕುದುರಿಸಿದವರು

ಆಗೆಲ್ಲ ನನ್ನ ಕಣ್ಣಲ್ಲೇ
ಕನಸುಗಳು ಗೂಡುಕಟ್ಟುತ್ತವೆ ಎಂದು
ಬೀಗುತ್ತಿದ್ದ ಕಾಲ
ವಯಸ್ಸು ಹದಿನೈದೋ ಹದಿನಾರೋ...
ಚಾದರದ ಒಳಗೊಳಗೇ ಮುದುರಿ,
ಮಗ್ಗುಲು ಬದಲಾಯಿಸದೆ
ಬೆಳಗು ಹಾಯಿಸಿದ ರಾತ್ರಿಗಳು
ಇಂದು ಯೋಚಿಸಿದರೆ
ತೀರ ಸಿಲ್ಲಿ ಸಿಲ್ಲಿ!

ಜಡೆ ಹೆಣೆಯುವಾಗ
ಕನ್ನಡಿಯ ಆ ತುದಿಯಲ್ಲಿ
ಯಾರೋ ಕಣ್ಣು ಮಿಟುಕಿಸಿದಂತೆ ಎನಿಸಿ
ಬೈತಲೆಗೆ ತುಟಿ ತಾಕಿಸಿದಂತೆ ಭ್ರಮಿಸಿ
ಸರಸರನೆ ಹೆಜ್ಜೆ ಹಾಕಿ
ಕಿಟಕಿಯ ಬದಿಯ ಜಾಗವನ್ನೇ ಆಯ್ದು
ರಸ್ತೆಯತ್ತ ನೋಟ ನೆಟ್ಟಾಗ
ಕಣ್ಣಲ್ಲಿ ಹಸಿ-ಹಸಿ ವಿರಹ...

ದೇಹ ಚಿಗಿತುಕೊಳ್ಳುವ ಹೊತ್ತಲ್ಲಿ
ಪ್ರತಿ ಎಲೆಯ ವಾಸನೆಯನ್ನೂ
ಗ್ರಹಿಸುವ ಉಮೇದಿನಲ್ಲಿ
ಕಣ್ಣಲ್ಲಿ ಗೂಡು ಕಟ್ಟಿದ್ದ ಕನಸು
ಒಬ್ಬರಿಂದೊಬ್ಬರಿಗೆ ವರ್ಗ
ವಾಗುತ್ತ - ಬಣ್ಣಬಣ್ಣದ
ಮೊಟ್ಟೆಗಳನ್ನು ಇಡುತ್ತ ಹೋದದ್ದು
ತಿಳಿಯಲೇ ಇಲ್ಲ
ಪುಟಾಣಿ ಅಲೆಗಳನ್ನು
ಗ್ರಹಿಸುವ ವಯಸ್ಸೂ ಅದಲ್ಲ

ದಿನ ಕಳೆದಂತೆ
ಕನಸು ಮೊಟ್ಟೆಗಳಲ್ಲಿ ಯಾವವೂ
ಮರಿಯಾಗದೆ ಜಳ್ಳಾಗಿ
ಬಿಟ್ಟವು ಬರಿದೇ ತಮ್ಮ
ಚಿಪ್ಪುಗಳನ್ನು ಉಳಿಸಿ...
ಆದರೂ
ನಿಮಗೆಲ್ಲ ಋಣಿ ನಾನು
ಅಂಗಾಂಗ ಚಿಗುರಿಸಿದ್ದಕ್ಕೆ
ಕನಸ ಕುದುರಿಸಿದ್ದಕ್ಕೆ.

4 comments:

Gururaja Narayana said...

ನಮಸ್ಕಾರ ಪೂರ್ಣಿಮ, ನಿಮಗೊಂದು ಆಹ್ವಾನ ಪತ್ರಿಕೆ.

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.


ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು
-ಕನ್ನಡಸಾಹಿತ್ಯ.ಕಾಂ ಬಳಗ

ಹರಿಹರಪುರ ಶ್ರೀಧರ್ said...

very good poem. Experience only can give such a beutiful poem. I am very glad to read such a poem. Let more poems come from yr pen.
Hariharapurasridhar

Anonymous said...

ತುಂಬಾ ಚೆನ್ನಾಗಿದೆ. ಕವನವೆಂದರೆ ಹೀಗಿರಬೇಕು ಅಂತಾ ಉದಾಹರಣೆ ಕೊಡಬಹುದು ರೀ. ಆಗಲೇ ಒಂದು ದಿನಾ ನೋಡಿ ಇಂಗ್ಲೀಷ್ ನಲ್ಲಿ ಪ್ರತಿಕ್ರಿಯಿಸಿರುವೆ. ಇವತ್ತು ಮತ್ತೆ ನೋಡಿದಮೇಲೆ ಸುಮ್ಮನಿರಲು ಮನಸ್ಸು ಬರಲಿಲ್ಲ.
ಹರಿಹರಪುರಶ್ರೀಧರ್
hariharapurasridhar.blogspot.com

shivu.k said...

ಫೂರ್ಣಿಮಾ ಮೇಡಮ್,

ನಿಮ್ಮ ಮತ್ತೊಂದು ಕವಿತೆ ಓದಿದೆ...ಮೊದಲ ಕವಿತೆಗಿಂತ ಸರಳವಾಗಿದೆ ಅನ್ನಿಸಿತು. ಕನಸು ಕಲ್ಪನೆಗಳ ಬಗ್ಗೆ ಅಲ್ಲಲ್ಲಿ ಮಿಂಚು ಹರಿದಿದೆ....

ದಿನ ಕಳೆದಂತೆ
ಕನಸು ಮೊಟ್ಟೆಗಳಲ್ಲಿ ಯಾವವೂ
ಮರಿಯಾಗದೆ ಜಳ್ಳಾಗಿ
ಬಿಟ್ಟವು ಬರಿದೇ ತಮ್ಮ
ಚಿಪ್ಪುಗಳನ್ನು ಉಳಿಸಿ...

ಈ ಸಾಲುಗಳು ಕಾಡುತ್ತವೆ......

ಆಹಾಂ! ನೀವು ಬ್ಯುಸಿಯೆಂದು ಕಾಣುತ್ತದೆ.. ಮತ್ಮರ್ಡುವಿನ ಮಕ್ಕಳ ಬಗ್ಗೆ ನನ್ನ" ಪುಟ್ಟ ಪುಟ್ಟ ಸಂತೋಷಗಳು " ಲೇಖನದಲ್ಲಿ ಬರೆದಿದ್ದೇನೆ. ಹಾಗೆ ಹೊಸ ಲೇಖನದಲ್ಲಿ ಒಂದಷ್ಟು ಟೋಪಿಗಳು ಬಂದಿವೆ ಇಷ್ಟವಿದ್ದರೆ ಬಂದು ಟೋಪಿ ಹಾಕಿಸಿಕೊಳ್ಳಿ....ಮತ್ತೂ ಇಷ್ಟವಾದರೆ ನನ್ನ ಹಳೇ ಸರಣಿ ಟೋಪಿಗಳಿಗೂ ಬೇಟಿಕೊಡಿ...